ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ ಆಯೋಜಿಸಿದ ಸಾಹಿತ್ಯ ಸಹವಾಸ’ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ

ಯು.ಆರ್.ಅನಂತಮೂರ್ತಿಯವರು ಶಿವರಾಮ ಕಾರಂತ, ಗೋಪಾಲಕೃಷ್ಣ ಅಡಿಗ ಮತ್ತು ನವ್ಯ ಸಾಹಿತ್ಯದ ಕುರಿತು ನೀಡಿರುವ ಮೂರು ವಿಡಿಯೊ ಉಪನ್ಯಾಸಗಳನ್ನು ವಿಶ್ವವಿದ್ಯಾಲಯದ ಯೂಟ್ಯೂಬ್ ವಾಹಿನಿಯ ಮೂಲಕ ಬಿಡುಗಡೆಗೊಳಿಸಲಾಯಿತು. ಇಡೀ ದಿವಸ ನಡೆದ ಕಾರ್ಯಕ್ರಮದಲ್ಲಿ ಮುನ್ನೂರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. 

Location Udupi, Karnataka
GO K87 W Wc AA Vwrq 1

ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವು ಉಡುಪಿಯಲ್ಲಿ ಆಯೋಜಿಸಿದ ಸಾಹಿತ್ಯ ಸಹವಾಸ’ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರೆಯಿತು. 

ಉಡುಪಿಯ ಎಂ. ಜಿ. ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಜ್ಞಾನಪೀಠ ಪ್ರಶಸ್ತಿ ವಿಜೇತ ದಿ. ಯು ಆರ್‌ಅನಂತಮೂರ್ತಿಯವರು ಕನ್ನಡದ ಸಾಹಿತ್ಯ ಲೋಕದ ದಿಗ್ಗಜ ಶಿವರಾಮ ಕಾರಂತ, ನವ್ಯ ಸಾಹಿತ್ಯ, ಮತ್ತು ನವ್ಯ ಸಾಹಿತ್ಯದ ಹರಿಕಾರ ಗೋಪಾಲಕೃಷ್ಣ ಅಡಿಗರ ಕುರಿತು ನೀಡಿರುವ ಉಪನ್ಯಾಸಗಳನ್ನು ಇಂಗ್ಲಿಷ್‌ಉಪಶೀರ್ಷಿಕೆಗಳೊಂದಿಗೆ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಯೂಟ್ಯೂಬ್ ವಾಹಿನಿಯ ಮೂಲಕ ಬಿಡುಗಡೆ ಮಾಡಲಾಯಿತು. ಮುಂದಿನ ದಿನಗಳಲ್ಲಿ ಈ ವಿದ್ವತ್ಪೂರ್ಣ ಉಪನ್ಯಾಸಗಳು ಪಾಡ್ಕಾಸ್ಟ್ ರೂಪದಲ್ಲಿಯೂ ಎಲ್ಲ ಆಸಕ್ತರಿಗೆ ಲಭ್ಯವಾಗಲಿವೆ.

ವಿಡಿಯೊ ಸರಣಿಯನ್ನು ಬಿಡುಗಡೆ ಮಾಡಿದ ನಾಡಿನ ಹಿರಿಯ ಸಾಹಿತಿಗಳು ಮತ್ತು ಚಿಂತಕರಾದ ಲಕ್ಷ್ಮೀಶ ತೋಳ್ಪಾಡಿಯವರು ಮಾತನಾಡಿ ” ಮನಸ್ಸು ಮುಟ್ಟಬಹುದಾದ ಸೂಕ್ಷ್ಮಾತಿಸೂಕ್ಷ್ಮವಾದ ಲಹರಿಗಳನ್ನು, ಅಸ್ತಿತ್ವದ ಬಿಂದುಗಳನ್ನು ಈ ನೆಲದ ಮೂವರು ಮಹನೀಯರಾದ ಕಾರಂತರು, ಅನಂತಮೂರ್ತಿ ಮತ್ತು ಅಡಿಗರು ಮುಟ್ಟಿದವರು. ಅಡಿಗರು ಸಿದ್ಧಶೈಲಿಯಿಂದ ಹೊರಟು ಹೊಸಹುಟ್ಟು ಅಥವಾ ತಾವು ಪಡೆಯಬೇಕಾದ ನಾವೀನ್ಯತೆಯ ಅನುಕೂಲದ ಅನಿವಾರ್ಯತೆಯನ್ನು ತೋರಿಸಿಕೊಟ್ಟವರು. ಕಾರಂತರದು ಸ್ವಯಂಕೃತ ವ್ಯಕ್ತಿತ್ವ. ತಮ್ಮದಾರಿ ಮತ್ತು ಅಭಿವ್ಯಕ್ತಿಯನ್ನು ತಾನೇ ಕಂಡುಕೊಂಡವರು. ಅದೊಂದು ಚಾರಿತ್ರಿಕ ಸ್ಥಿತಿಯಷ್ಟೇ ಅಲ್ಲ; ಅದಕ್ಕೆ ಅವರ ವ್ಯಕ್ತಿತ್ವದ ಪ್ರಯೋಗಶೀಲತೆಯೂ ಕಾರಣ. ಅವರದು ಲಿಪಿಬದ್ಧ ಸಂಪ್ರದಾಯ ಕಡಿಮೆ. ಮೌಖಿಕ ಸಂಪ್ರದಾಯವೇ ಹೆಚ್ಚು. ವೇಗ, ತಾತ್ಕ್ಷಣಿತ ಪ್ರವೃತ್ತಿ ಅವರಲ್ಲಿ ಎದ್ದು ಕಾಣುವ ಗುಣಗಳು. ಅವರದು ಕಾಯುವಿಕೆಗೆ ಒಗ್ಗದ ಅಸಲು ಕಸುಬು. ಶಾಸ್ತ್ರಕ್ಕಿಂತ ಅವರಿಗೆ ಮನೋಧರ್ಮ ಪ್ರಧಾನವಾಗಿರುವ ಭಾವ ಮುಖ್ಯ ಎಂದು ಹೇಳಿದರು.

ಕಾರಂತ ಮತ್ತು ಅಡಿಗರ ಜೀವನವನ್ನು ಬಿಂಬಿಸುವ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿದ ಶ್ರೀಮತಿ ಎಸ್ತರ್ ಅನಂತಮೂರ್ತಿ ಮತ್ತು ಕ್ಷಮಾ ರಾವ್, ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರೊ. ಶರತ್‌ಅನಂತಮೂರ್ತಿ, ಉಪಕುಲಸಚಿವರು, ಕುವೆಂಪು ವಿಶ್ವವಿದ್ಯಾನಿಲಯ, ಅವರು ತಮ್ಮ ತಂದೆಯವರ ನೆನಪುಗಳು ಹಾಗೂ ಅವರ ಸಾಹಿತ್ಯದ ಕೆಲಸಗಳು, ಸಾಹಿತಿಗಳ ಸಂಪರ್ಕವನ್ನು ಸ್ಮರಿಸಿಕೊಂಡರು. ಇಂದಿನ ಸಂದರ್ಭದಲ್ಲಿ ಅಂತಹ ಆರೋಗ್ಯಕರ ಚರ್ಚೆಯ ವಾತಾವರಣ ಕಾಣದಿರುವುದರ ಬಗ್ಗೆ ವಿಷಾದಿಸಿದರು. ಸಾಹಿತ್ಯ ವಿಮರ್ಶೆ ಇನ್ನಷ್ಟು ಗಂಭೀರವಾಗಿ‌ನಡೆಯಬೆಕಾದ ಅಗತ್ಯವನ್ನು ತಿಳಿಸಿದರು. ವಿಶೇಷವಾಗಿ ಅಡಿಗರ ಪ್ರಸಿದ್ಧ ಕವಿತೆ ’ ರಾಮನವಮಿಯ ದಿವಸ’ ವನ್ನು ಓದಿ ಪದ್ಯ ಬಗೆವ ಬಗೆಯ ಕುರಿತು ಗಂಭೀರ ಚರ್ಚೆ ನಡೆಸಿದ್ದನ್ನು ನಿರೂಪಿಸಿದರು. ತಂದೆಯವರ ಸೃಜನಾತ್ಮಕ ಪ್ರಕ್ರಿಯೆಯೇ ಅವರ ಮಾತಾಗಿತ್ತು. ಮಾತಾಡುತ್ತ ಆಡುತ್ತ ಅವರ ಚಿಂತನಶೀಲತೆ ಹುರಿಗಟ್ಟುತ್ತಿತ್ತು. ಅದಕ್ಕಾಗಿ ಅವರಿಗೆ ಜನಸಂಪರ್ಕದ ಅಗತ್ಯವಿತ್ತು. ಮಾತಿನ‌ಮೂಲಕವೇ ಅವರ ಹೊಸ ಯೋಚನೆಗಳು ರೂಪುತಳೆಯುತ್ತಿದ್ದವು ಎಂದು ತಿಳಿಸಿದರು.

ಕಾರಂತರ ಬಗೆಗಿನ ಅನಂತಮೂರ್ತಿಯವರ ಬಗೆಗಿನ ಉಪನ್ಯಾಸಕ್ಕೆ ಪ್ರತಿಸ್ಪಂದಿಸಿದ ಪ್ರೊ. ಕೆ. ಚಿನ್ನಪ್ಪ ಗೌಡ, ವಿಶ್ರಾಂತ ಉಪಕುಲಪತಿಗಳು, ಜಾನಪದ ವಿಶ್ವವಿದ್ಯಾನಿಲಯ, ಅವರು ಮಾತನಾಡಿ, ” ಕನ್ನಡದ ಮನಸ್ಸುಗಳನ್ನು ಕಟ್ಟುವ ಕೆಲಸವನ್ನು ತಮ್ಮ‌ಜೀವಮಾನದುದ್ದಕ್ಕೂ ಕಾರಂತರು ಮಾಡಿದವರು. ಒಂದು ಲಕ್ಷಪುಟಗಳಷ್ಟು ವಿಸ್ತಾರವಾದ, ನಾನೂರಕ್ಕೂ ಮಿಕ್ಕಿದ ಕೃತಿಗಳಷ್ಟು ವಿಫುಲವಾದ ಬರೆವಣಿಗೆ ಅವರದು. ಅವರನ್ನು ನೆನಪಿಸಿಕೊಂಡಾಗಲೆಲ್ಲ ನನಗೆ ಎದ್ದು ಕಾಣುವುದು ಅವರ ಸಿಟ್ಟು. ಅನಂತಮೂರ್ತಿಯವರು ಕಾರಂತರ‌ಕುರಿತು‌ಮಾತಾಡುತ್ತ ಅವರು ದಕ್ಷಿಣ ಕನ್ನಡ ಜಿಲ್ಲೆಯ ಭೂತ ಇದ್ದಂತೆ ಎಂದು ಹೇಳಿದ್ದು ನನ್ನನ್ನು ವಿಶೇಷವಾಗಿ ಸೆಳೆದಿದೆ ಎಂದು ಹೇಳಿದರು. 

ಅಡಿಗರ ಬಗೆಗಿನ ಅನಂತಮೂರ್ತಿಯವರ ಬಗೆಗಿನ ಉಪನ್ಯಾಸಕ್ಕೆ ಪ್ರೊ. ವಿಕ್ರಮ್‌ವಿಸಾಜಿ, ಮುಖ್ಯಸ್ಥರು, ಕನ್ನಡ ವಿಭಾಗ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿ, ಇವರು ಮಾತನಾಡಿದರು. 

ಕಾರಂತರ ಸಾಹಿತ್ಯ ಸೃಷ್ಟಿಯ ಕುರಿತ ವಿದ್ವತ್‌ಗೋಷ್ಠಿಯಲ್ಲಿ ಹೆಸರಾಂತ ವಿಮರ್ಶಕರಾದ ಡಾ. ಟಿ. ಪಿ. ಅಶೋಕ, ಚಲನಚಿತ್ರ ನಿರ್ದೇಶಕರಾದ ಪಿ. ಶೇಷಾದ್ರಿ, ಬೆಂಗಳೂರಿನ ಎನ್‌. ಎಂ. ಕೆ. ಆರ್‌. ವಿ. ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಸಂಧ್ಯಾ ಹೆಗಡೆ ದೊಡ್ಡಹೊಂಡ ಅವರು ಭಾಗವಹಿಸಿದ್ದರು. ಡಾ. ತಾರಿಣಿ ಶುಭದಾಯಿನಿ, ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚಿತ್ರದುರ್ಗ, ಇವರು ಅಡಿಗರ ಕಾವ್ಯದ ಬಗ್ಗೆ ಮಾತನಾಡಿದರು. ಅಜೀಂ ಪ್ರೇಮ್‌ಜಿ ಫೌಂಡೇಷನ್ ನ ಮುಖ್ಯ ಸಂವಹನಾಧಿಕಾರಿ ಸುಧೀಶ್ ವೆಂಕಟೇಶ್ ಸ್ವಾಗತ ಕೋರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಅಡಿಗರ ಕಾವ್ಯವಾಚನ, ಕಾರಂತರು ಮತ್ತು ಅಡಿಗರೊಂದಿಗಿನ ಒಡನಾಟದ ನೆನಪುಗಳ ಹಂಚಿಕೆ, ಯಕ್ಷಗಾನ ಪ್ರದರ್ಶನ ಕಾರ್ಯಕ್ರಮಕ್ಕೆ ಮೆರುಗನ್ನು ತಂದವು. ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಪ್ರಬಂಧ ಮತ್ತು ಅಡಿಗರ ಗೀತೆಗಳ ಗಾಯನ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನೂ ವಿತರಿಸಲಾಯಿತು.

ಹಿರಿಯ ಒಡಿಸ್ಸಿ ನೃತ್ಯ ಕಲಾವಿದೆ ಮತ್ತು ಶಿವರಾಮ ಕಾರಂತರ ಮಗಳಾದ ಕ್ಷಮಾ ರಾವ್‌, ಅಜೀಂ ಪ್ರೇಮ್‌ಜಿ ಫೌಂಡೇಷನ್‌ನ ಉಮಾಶಂಕರ್‌ಪೆರಿಯೋಡಿ, ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಕನ್ನಡ ಉಪಕ್ರಮದ ಸಹನಿರ್ದೇಶಕರಾದ ಎಸ್.ವಿ.ಮಂಜುನಾಥ್, ಡಯಟ್‌ಉಡುಪಿಯ ಹಿರಿಯ ಉಪನ್ಯಾಸಕರಾದ ಡಾ. ಅಶೋಕ್‌ಕಾಮತ್‌, ಪೂರ್ಣಪ್ರಜ್ಞ ಸೆಂಟರ್‌ಫಾರ್‌ರಿಸರ್ಚ್‌ಅಂಡ್‌ಡೆವಲಪ್‌ಮೆಂಟ್‌ನ ನಿರ್ದೇಶಕರಾದ ಡಾ. ಕೃಷ್ಣ ಕೊತ್ತಾಯರವರು ಉಪಸ್ಥಿತರಿದ್ದರು. 

ಪ್ರಬಂಧ ಸ್ಪರ್ಧೆಯ ಬಹುಮಾನ ವಿಜೇತರು:

  • ಮೊದಲನೆ ಬಹುಮಾನ: ಸುಶ್ಮಿತಾ
  • ಎರಡನೆ ಬಹುಮಾನ: ಅಶ್ವಿನಿ. ಡಿ. ಎಸ್
  • ಮೂರನೆ ಬಹುಮಾನ: ಮುಶೀನಾ ಬಾನು

ಗಾಯನ ಸ್ಪರ್ಧೆಯ ಬಹುಮಾನ ವಿಜೇತರು:

  • ಮೊದಲನೆ ಬಹುಮಾನ: ಚಿನ್ಮಯಿ ರಾವ್
  • ಎರಡನೆ ಬಹುಮಾನ: ಪ್ರಣದ್ ರಾವ್
  • ಮೂರನೆ ಬಹುಮಾನ: ಅಕ್ಷರ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ರಶ್ಮಿ ಪ್ರಭಾಕರ್ ಮೊಬೈಲ್‌: +91 9481934254

Rashmi.​prabhakar@​k2communications.​in